Wednesday, December 10, 2008

ಕಳೆದು ಹೊದೇವೆ ನಾವು ?
ಗೆಳತಿ ಶ್ರೀನಿಧಿ ಒಮ್ಮೆ ಹೇಳಿದ ಮಾತುಗಳು ಆಗಾಗ ನೆನಪಾಗುತ್ತವೆ. ’ಯಾವುದೋ ಅನಿಶ್ಚಿತತೆಯತ್ತ ಸಾಗುತ್ತಿದ್ದೇವೆ ಅಂತನ್ಸುತ್ತೆ. ಮೊದಲಿನ ಮಹತ್ವಾಕಾಂಕ್ಷೆ ಈಗಿಲ್ಲ. ಎಷ್ಟು ಹೆಸರು ಬಂದ್ರೇನು, ನೆಮ್ಮದಿ ಸಿಗುತ್ತೆ ಅನ್ನೋ ನಂಬಿಕೆಯಿಲ್ಲ. ಬೇರೆ ದಾರಿನಾದ್ರೂ ಹಿಡಿಯೋಣ ಅಂದ್ರೆ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಸಿಗುತ್ತೆ ಅನ್ನೋ ಗ್ಯಾರಂಟಿಯಿಲ್ಲ. ಮೊದಲು ಯಾವೆಲ್ಲಾ ಕಲ್ಪನೆಯಿಟ್ಟು ಉತ್ಸಾಹದಿಂದ ಬಂದಿದ್ದೆವೋ ಅದೆಲ್ಲಾ ಇಳಿದುಹೋಗಿದೆ. ಕ್ರಿಯೇಟಿವ್..! ಹಾಗಂದ್ರೆ ? ಎಲ್ಲಾ ಅಟ್ಟ ಹತ್ತಿ ಕೂತಿದೆ. ಎಲ್ಲಿ ದಿನದಿಂದ ದಿನಕ್ಕೆ ವರ್ಕೊಲಿಕ್ ಆಗ್ತೀವೋ ಅಂತ ಭಯ ಕಾಡ್ತಿದೆ !’
ನಿರಾಸೆಯೋ..., ಬೇಸರವೋ.., ಅರಗಿಸಿಕೊಳ್ಳಲಾರದೇ ಹೋದ ವಾಸ್ತವವೋ ! ಗೊತ್ತಿಲ್ಲ. ಒಟ್ಟಿನಲ್ಲಿ ದಿನವೂ ಮತ್ತೆ ಮಿಂದೆದ್ದು ಮತ್ತೆ ಮುಳುಗುತ್ತಿರುವ, ಕಳೆದ ೭ ವರ್ಷಗಳಿಂದ ನಮ್ಮ ಒಡನಾಡಿಯಾದ ’ಪತ್ರಿಕೋದ್ಯಮ’ ಎನ್ನುವ ನಾಗಾಲೋಟದ ಕುದುರೆಯೆಡೆಗೆ ಆಡಿದ ಈ ಮಾತುಗಳು ಬಹುಷಃ ಇಂದು ಒಬ್ಬಿಬ್ಬರ ಅನುಭವವಾಗಿ ಉಳಿದಿಲ್ಲ. ಸಮೂಹ ಮಾಧ್ಯಮ, ಪತ್ರಿಕೋದ್ಯಮದ ಬಗ್ಗೆ ಅಪಾರ ನಿರೀಕ್ಷೆ, ಕನಸು, ಗುರಿಗಳ ಸಾಧ್ಯತೆಗಳೆಡೆಗೆ ನಂಬಿಕೆಯಿಟ್ಟು ಬಂದ ನಮ್ಮಂತವರು ದಿನದಿನವೂ ಮಾಡಿಕೊಳ್ಳುವ ಆತ್ಮ ವಿಮರ್ಶೆ. ಹೀಗೊಂದು ಜಿಜ್ಞಾಸೆ..!
ಎಷ್ಟೋ ಬಾರಿ ಮಾಧ್ಯಮವೆಂಬ ಅತಿರಂಜಿತ ಲೋಕದೆದುರು, ಅದರೊಳಗಿನ ಉದ್ವಿಗ್ನತೆ, ಆತಂಕ, ನಿತ್ಯ ಜಂಜಾಟ, ಸ್ಪರ್ಧೆಯಿಂದಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಲುಗಿ ಹೋಗಿ, ಒಂದರ್ಥದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುವ ಈ ಹಂತಕ್ಕೆ ಬಂದರೂ ಅದೆಷ್ಟೋ ಬಾರಿ ನಾವು ಜಾಣ ಕಿವುಡರಾಗುವುದಿದೆ. ಅದು ನಮ್ಮ ದೌರ್ಬಲ್ಯವೋ, ವೃತ್ತಿಯ ಸಹಜತೆಯೋ ಅಥವಾ ನಮ್ಮನ್ನು ನಾವು ಅರ್ಪಿಸಿಕೊಳ್ಳುವ ಭರದಲ್ಲಿ ಕಣ್ಮರೆಯಾಗಿ ಹೋಗುವ ವಿಚಿತ್ರವೋ..,ಒಟ್ಟಿನಲ್ಲಿ ಅನುಭವ ಎಂದೆನ್ನುವ ಕುಲುಮೆಯಲ್ಲಿ ಬೆಂದರೂ ನಾಲಿಗೆಗೆ ಹತ್ತಿದ ಉಪ್ಪಿನಕಾಯಿ ರುಚಿಯನ್ನು ಕಳೆದುಕೊಳ್ಳಲು ಯಾರು ತಾನೇ ಸಿದ್ಧರಿರುತ್ತಾರೆ ?
ಕೆಲವರು ಹೊಟ್ಟೆಯ ಹಿಟ್ಟಿನ ಚೀಟಿಯ ದಾರಿಗಾಗಿ ಬಂದುಳಿದವರಾದರೆ, ಇನ್ನೊಂದಷ್ಟು ಮಂದಿ ಕನಸಿನ ಮೊಂಬತ್ತಿಯೊಳಗೆ ಕರಗಿ ಕಣ್ಕಣ್ಣು ಬಿಟ್ಟವರು. ಬಹಳ ಬೇಗ ಹೆಸರು ತಂದುಕೊಡಬಲ್ಲ ಕ್ಷೇತ್ರಕ್ಕಿಳಿದ ಧನ್ಯತೆ, ಸೆಟ್ಲ್ದ್ ಎಂಬ ಭದ್ರತಾ ಭಾವ ಕಾಲಕ್ರಮೇಣ ಹಗಲಿರುಳು ದುಡಿಯುವ ಒತ್ತಡಕ್ಕೆ ಕೊರಗಿ ಕರಗಿಹೋಗಿ ಬಿಟ್ಟು ಬರಲಾಗದವರು ಮತ್ತೊಂದಷ್ಟು ಜನ. ಭ್ರಮೆಯೊಳಗಣ ಪ್ರಪಂಚಕ್ಕೆ ಒಂದಷ್ಟು ಲಾಬಿ, ಇನ್ನೊಂದಷ್ಟು Hippocraticನೀತಿಗಳು-ಒಂದಷ್ಟು ಕಲ್ಪಿತ ಧೋರಣೆಗಳು.., ಫಲ? ಬಲಿಯಾಗುತ್ತಿರುವ ಪತ್ರಿಕಾಧರ್ಮ, ಪಾರದರ್ಶಕವೆಂದು ಹೇಳಿಕೊಳ್ಳುತ್ತಲೇ ಅದನ್ನು ಸಾಧಿಸಿಕೊಳ್ಳುವಲ್ಲಿ ಸೋಲುತ್ತಿರುವ, ಲಯ ತಪ್ಪುತ್ತಿರುವ ’ಮಾಧ್ಯಮಾಲಯ’ಗಳು ; ಟಿ ಅರ್ ಪಿ ದಾಸ್ಯಕ್ಕೆ ಬಲಿಯಾಗಿ ಕಂಡಕಂಡದ್ದನ್ನೆಲ್ಲಾ ತಿಂದು ಕಕ್ಕುವ ಕೆಟ್ಟ ಹಸಿವು ; ಯಾರದೋ ವೈಯಕ್ತಿಕ ಬದುಕನ್ನು ’ತಮ್ಮದೇ ಇಷ್ಟ, ಎನ್ನುವ ಸ್ವೇಚ್ಛೆ, ದಾರ್ಷ್ಟ್ಯ; ಜನರು ಕೇಳುತ್ತಿದ್ದಾರೆ ಅಂತ ನೆವದಲ್ಲಿ ಮಸ್ಕಾ ಹೊಡೆಯುತ್ತಾ, ಲಂಗುಲಗಾಮಿಲ್ಲದೆ ಹುಚ್ಚು ಕುದುರೆಯಂತಾಡುವ ’ಆದರ್ಶ ಪತ್ರಕರ್ತರು, ಮಾಧ್ಯಮ ಮಿತ್ರರು’, ತಮ್ಮ ಅಭಿಪ್ರಾಯಗಳನ್ನೇ ಜನರದ್ದೆಂದು ಹೇಳಿ ಮೂದಲಿಸಿಯೋ ಅಥವಾ ಸಮರ್ಥಿಸಿಕೊಂಡೋ ದಾರಿ ತಪ್ಪಿಸುವ ದೀವಟಿಗರು ! ; ಇದು ಯಾರ ಸೋಲು , ಯಾರ ಗೆಲುವು? ಮಾಧ್ಯಮದ್ದೇ ? ಎನ್ನುವ ಮಾಧ್ಯಮಮಿತ್ರರದ್ದೇ ?
ಕಲಿತ ಥಿಯರಿಗಳಷ್ಟೇ ಪತ್ರಿಕೋದ್ಯಮ ಅಲ್ಲ ಎಂಬ ಸತ್ಯದಿಂದ ತೊಡಗಿ, ಕಸಿವಿಸಿಯೊಂದಿಗೆ ಆರಂಭಗೊಂಡ ತರ್ಕಗಳು ಇಂದೇಕೋ ಅಸಡ್ಡೆಯಾಗಿ ಬೆಳೆದಿದೆ, ಭ್ರಮನಿರಸನವಾಗಿದೆ. ಆಗೆಲ್ಲಾ ಪ್ರಶ್ನಿಸಿಕೊಳ್ಳುವವಳಿದ್ದೇನೆ., ’ನನ್ನ ಕನಸಿನ ಪತ್ರಕರ್ತೆ ಮೂಲೆ ಪಾಲಾದಳೇ ?’
ಅಷ್ಟಕ್ಕೂ ’ಈ ಕ್ಷೇತ್ರ ಅವಕಾಶಗಳ ಆಗರ, ಜ್ಞಾನದ ಪೀಯೋಶ , ಮೊಗೆದಷ್ಟು ಹರಿವು ಜಾಸ್ತಿ, ಪಡೆದುಕೊಳ್ಳುವ ಜಾಣ್ಮೆ, ಉಳಿಸಿಕೊಳ್ಳುವ ತಾಳ್ಮೆ ಇದ್ದಲ್ಲಿ ಅದು ಬದುಕಿನ ಸಂಜೀವಿನಿ, Sky is as big as your Windowಅಂತೀರಾ?
ತಪ್ಪೇನಿಲ್ಲ ಬಿಡಿ..!

Saturday, November 8, 2008

ಕಥೆ ಕಟ್ಟುವ ಬಗೆ...

'ನಾನು ಕಥೆ ಬರೀಲಿಕ್ಕೆ ಪ್ರಾರಂಭಿಸಿ ಆರೇಳು ವರ್ಷ ಆಯಿತಷ್ಟೆ. ಹೀಗಿರುವಾಗ 'ಕಥೆ ಕಟ್ಟುವುದು ಹೇಗೆ' ಎಂಬ ವಿಷಯದಲ್ಲಿ ಉಪನ್ಯಾಸ ಕೊಡಿ ಅಂತಂದ್ರೆ ಮುಜುಗರ ಅನ್ಸುತ್ತೆ' ಅಂತ ವಸುದೇಂಧ್ರ ವಿನೀತಭಾವದಿಂದಲೇ ಪೀಠಿಕೆ ಹಾಕಿದ್ದರು. ಅದರಲ್ಲೂ ನೂಪುರ ಭ್ರಮರಿಯನ್ನು ಪ್ರಾರಂಭಿಸಿದ ಹೊಸತರಲ್ಲಿ, ಕಳಿಸಿಕೊಟ್ಟ ಮೊದಲ ಸಂಚಿಕೆಯನ್ನು ಪ್ರೀತಿಯಿಂದ ಓದಿ, ಅವರಾಗಿಯೇ ಬರೆದ ಉತ್ಸಾಹದ ಮಾತುಗಳನ್ನು ಮರೆಯಲಿಕ್ಕಾದೀತೇ? ಹಾಗಾಗಿಯೇ ಅವರ ಪತ್ರ ಎಷ್ಟೋ ಪತ್ರಗಳ ಕಳೆದುಹೋಗುವಿಕೆಯ ನಡುವೆಯೂ ಜೋಪಾನವಾಗಿದೆ. ಅಷ್ಟು ಮಾತ್ರವಲ್ಲ, ಕಂಡಷ್ಟು ಬಾರಿಯೂ, ಮೊನ್ನೆ ಮೊನ್ನೆ ಗೆಳೆಯ ರಾಮುವಿನ ಚೈತ್ರರಶ್ಮಿಯ ನಾಲ್ಕನೇ ವಾರ್ಷಿಕ ಸಂಭ್ರಮಕ್ಕೂ ಬಂದಾಗಲೂ ಪ್ರೀತಿಯಿಂದ ಅವರಾಗಿಯೇ ಗುರುತು ಹಿಡಿದು ಮಾತನಾಡಿಸುವ ಸಹೃದಯತೆಗೆ, ಪತ್ರಿಕೆಯ ಬಗೆಗಿರುವ ಅವರ ಪ್ರೀತಿಗೆ.. ನಿಜಕ್ಕೂ ಒಂದು ಕ್ಷಣಕ್ಕೂ ನನಗೆ ಏನೂ ತೋಚುವುದಿಲ್ಲ.
ಹಾಗಾಗಿಯೇ ಒಂದಾನೊಂದು ಕಾಲದಲ್ಲಿ ಅವರೊಂದಿಗಿನ ಕಥೆಗಳ ಕುರಿತಾದ ಒಂದೂವರೆ ಘಂಟೆಗಳ ಸುದೀರ್ಘ ಸಂವಾದದ ಪುಟ್ಟ ಪುಟ್ಟ ನೆನಪುಗಳನ್ನು ಭ್ರಮರಿಯ ಬ್ಲಾಗ್ ಅಂಗಳದಲ್ಲಿ ನಿಮ್ಮೆದುರಿಗಿರುಸುತ್ತಿದ್ದೇನೆ. (ವಿಶೇಷವೆಂದರೆ, ಈ ಮೌನದೊಳಗಡೆ ಅರಳುವ ಕಥೆಗಳ ಬೆರಗಿನ ಪ್ರಸಂಗವು ಮಾತುಗಳ ಚಮತ್ಕಾರದೊಳಗೆ ಎದುರು ಕುಳಿತ ಕ್ಷಣಗಳ, ಸಂವಾದದ ೧೦ ಪುಟಗಳ ಕಥಾನಕದ ವರದಿ ಪ್ರಕಟವಾಗದೇ ಇದ್ದರೂ, ಇದರ ಪ್ರತಿ ಬಹುಷಃ ಒಂದು ನನ್ನ ಬಳಿಯಲ್ಲೂ, 'ಮಂಥನ'ದ ವಾದಿರಾಜರಲ್ಲೂ, ಪ್ರೀತಿಯ ಬರಹಗಾರ ವಸುಧೇಂಧ್ರರ ಬಳಿಯಲ್ಲೂ ಇದೆ. ! ಅದರ ಒಂದು ಮಿಂಚು ಓದುಗರಿಗಾಗಿ ಈ ಅಂಚೆಯಲ್ಲಿದೆ.)

'ಹೇಳಲಾರದ ಕಥೆಗಳೇ ಇಲ್ವೇ !' ಹಳೆಯ ವಸ್ತುಗಳಿಗೆ ಹೊಸ ರೂಪ ಹೊಸ ಬಣ್ಣ, ಹೊಸ ಕಣ್ಣು. ಅದೊಂದು ಬೆರಗಿನ, ಸಂಭ್ರಮದ ಅನುಭವ. ಆದರೆ ಆ ಕ್ಷಣ ಕ್ಷಣಿಕವಾಗಬಾರದಷ್ಟೇ !
ಥೆ ಅವಸರದ ಪ್ರಸವ ಅಲ್ಲ. ಸ್ಪಂದನವಿಲ್ಲದೆ ಕಥೆ ಮಾಡಲು ಹೊರಟರೆ ಆ ಪ್ರಯತ್ನ ನಿರರ್ಥಕ. ಕಥೆಗಿಂತ ಬದುಕು ದೊಡ್ಡದು. ಬದುಕಿನ ಒಂದು ಭಾಗ ಕಥೆಯೇ ಹೊರತು, ಕಥೆಯೇ ಬದುಕಲ್ಲ.
'ಕಣ್ಣು ತೆರೆದು ಬದುಕಬೇಕು. ಕಣ್ಣು ಮುಚ್ಚಿ ಬರೆಯಬೇಕು'. ಏಕೆಂದರೆ ಕಥೆಗೆ ಬೇಕಿರುವುದು, ಅದು ಹುಟ್ಟುವುದು ಮೌನದಲ್ಲಿ..ಅಂತರಂಗದಲ್ಲಿ.. ಕಥೆ ಬರೆಯೋದಕ್ಕೆ 'ಧ್ಯಾನ' ಬೇಕೆ ಬೇಕು. ಅಂದರೆ ಕಥೆಯಲ್ಲೇ ಮಿಂದು ಮುಳುಗುವ ಕಥಾ ಧ್ಯಾನ !
ಥೆ ಬರೀಬೇಕು ಅಂತಿದೀರಾ? ಹಾಗಾದ್ರೆ ಓದೋ ಚಟ ಬೆಳೆಸಿಕೊಳ್ಳಿ. ಕಥೆ ಕೇಳುವ ಅಭ್ಯಾಸವನ್ನೂ ಕೂಡಾ ! ನನಗಂತೂ ಸಾಹಿತ್ಯಕ್ಕಿಂತಲೂ ಸಿನಿಮಾಗಳೇ ಕಥೆಗಳಿಗೆ ಸ್ಫೂರ್ತಿ. ಬೇರೆ-ಬೇರೆ ಭಾಷೆಗಳ ಸಿನಿಮಾದೆಡೆಗಿನ ಹಪಹಪಿಯೇ ನನ್ನನ್ನು ಇನ್ನಷ್ಟು ಕಥೆ ಬರೆಯಲು ಪ್ರೇರೇಪಿಸುತ್ತದೆ. ಜೀವನವನ್ನು ಅನುಭವಿಸೋದು ಕೂಡಾ ಕಥೆ ಹೆಣೆಯುವಲ್ಲಿ ಒಂದು ದಾರಿಯಾಗುತ್ತದೆ.
ಒಂದು ವೇಳೆ ಕಥೆಗೂ, ಕವನಕ್ಕೂ -ಎರಡಕ್ಕೂ ಸರಿಹೊಂದುವ ವಸ್ತು ಸಿಕ್ಕಿದರೆ ಏನು ಮಾಡ್ತೀರಿ ? ಕಾಯ್ಕಿಣಿ ಹೇಳೋ ಹಾಗೆ, 'ಕಾವ್ಯ ಎನ್ನುವುದು ಪ್ರೇಮ. ಕಥೆ ಎನ್ನುವುದು ಮದುವೆ. ಕಾವ್ಯವು ವಧುವಾದರೆ, ಕಥೆ ವರ.' ವಸ್ತು ಮತ್ತು ಓದುಗರ ಆಯ್ಕೆ ನಿಮ್ಮದು.
ನೀವು ಐದು ಸಾವಿರ ಜನರು ಕುಳಿತು ಒಂದು ವರ್ಷ ಓದುವ ಕಥೆ, ಸಾಹಿತ್ಯವನ್ನು ಬರೀತೀರೋ ? ಅಥವಾ, ಐವತ್ತು ಜನರಂತೆ ಒಂದು ಸಾವಿರ ವರ್ಷ ಕೃತಿಯನ್ನು ಬರೀತೀರೋ ?
ಥೆ ಬರೆಯಲು ಪ್ರಾಮಾಣಿಕತೆ ಬೇಕು. ಧೈರ್ಯ ಬೇಕು. atleast ಇಂದಿನ ಮಟ್ಟಿಗಾದ್ರೂ ಕಥೆ ಬರೆಯೋವಾಗ ಪ್ರಾಮಾಣಿಕರಾಗಿರಬೇಕು. ಇಲ್ಲವಾದರೆ ಇಂದಿಗೆ ಚೆಂದ ಕಂಡ ಕಥೆ ನಾಳೆಗೆ ನಂದಿ ಹೋಗುತ್ತದೆ. ಸಾವಿರಾರು ಜನರ ಮನಸ್ಸಿಗೆ ಸುಖ ಕೊಟ್ಟರೂ, ಒಬ್ಬನ ಮನಸ್ಸನ್ನು ಹಿಂಸಿಸಿ ನೋಯಿಸುವುದು ಕಥೆಗಾರನ ಅಪ್ರಾಮಾಣಿಕತೆಯನ್ನು ತೋರಿಸುತ್ತದೆ.
ನಾವು ಪ್ರಭಾವಗಳಿಂದ ತಪ್ಪಿಸಿಕೊಳ್ಳಲಾರೆವು. ಆದರೆ ಅಂತಹ ಪ್ರಭಾವಗಳಲ್ಲೂ ನಮ್ಮದೇ ಶೈಲಿ, ಬಳಸಿಕೊಳ್ಳುವ ಕಲೆ, ಸ್ವಂತಿಕೆ ಇದ್ದರೆ ಎಷ್ಟು ಒಳ್ಳೆಯದು ಅಲ್ಲವೇ ? ಕಥೆಗಾರನು ಪೂರ್ವಾಗ್ರಹ ಬಿಟ್ಟು, ಎಲ್ಲವನ್ನೂ ಒಂದೇ ಚೌಕಟ್ಟಿಗೆ ಸೇರಿಸದೆ ನೋಡಿದಾಗಲೇ, ವಸ್ತುಗಳೆಡೆಗೆ ಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳಲು ಸಾಧ್ಯ. ಹಾಗಾಗಿ ನಿಮ್ಮೊಳಗಿನ, ಹೃದಯಾಂತರಾಳದ ಅಭಿವ್ಯಕ್ತಿ ಅಲ್ಲಿರಲಿ. ಪಾತ್ರ, ಸನ್ನಿವೇಶಗಳೂ ಬೇರೆ ಬೇರೆ ಅನ್ನಿಸಿದರೂ, ಕಥೆಗೆ ಇರುವ ಒಳಧ್ವನಿ ನಮ್ಮದಾಗಿರಲಿ.
ಥೆಗಳಲ್ಲಿ 'ಕಥನ ಕುತೂಹಲ'ವಿರಬೇಕು., ನಿಜ. ಆದರೆ ಕುತೂಹಲದ ಕುದುರೆಯೇರುವ ಪ್ರಸಂಗ ಪ್ರತೀ ಬಾರಿ ಒಳ್ಳೆಯದಲ್ಲ.
'ಕಲ್ಲು ಹೂವಾಗಿ ಅರಳುತ್ತದೆ' ಅನ್ನುವುದಿದ್ದರೆ ಹೂವಾಗಿ ಅರಳುವ ಸೌಂದರ್ಯದ ನಿರೀಕ್ಷೆ ಕಥೆಗಾರನಿಗೆ ಇರಬೇಕೇ ವಿನಃ 'ಅದ್ಹೇಗೆ, ಕಲ್ಲು ಹೂವಾಗಿ ಅರಳಿಯೇ ಬಿಡುತ್ತದೆ? ನೋಡಿಯೇ ಬಿಡೋಣ' ಎನ್ನುವ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಲ್ಲ. ಯಾವತ್ತಿಗೂ ವಿಚಾರಗಳು ಕಥೆಗಳಿಗೆ ಪೂರಕವಾಗಿ ಧ್ವನಿಸಬೇಕೇ ಹೊರತು, ಅದನ್ನೇ ಕೇಂದ್ರವಾಗಿಟ್ಟುಕೊಳ್ಳಬಾರದು.

ಮ್ಮ ಕಾಲದ್ದೇ ಆದ ಸಂಗತಿಗಳಿಗೇ ಅವಕಾಶ ನಾವು ಕೊಡದಿದ್ದರೆ ಹ್ಯಾಗೆ ? ಕಥೆ ಮೇಲಿನ ಪ್ರೀತಿ ಭಾಷೆಯನ್ನೇ ಮೀರಿ ನಿಲ್ಲಬೇಕು.
ಇಂದಿನ ಕಾಲದಲ್ಲಿ ಹದಿನೈದು ದಿನ ಪ್ರವಾಸಕ್ಕೆ ಹೊರದೇಶಕ್ಕೆ ಹೋಗಿಬಂದವರೂ ಕೂಡಾ ' ಪ್ರವಾಸ ಕಥನ'ಗಳನ್ನು ಬರೆದು ಪ್ರಕಟಿಸುತ್ತಾರೆ. ಎಲ್ಲೋ ಕೆಲವರು ಮಾತ್ರ ಆಳವಾಗಿ ಶೋಧಿಸಿದ್ದು ಬಿಟ್ಟರೆ, ಉಳಿದೆಲ್ಲವು ಸುಮ್ಮನೆ ನೋಡುವ ಪ್ರಕ್ರಿಯೆ ಅಷ್ಟೇ!
ಪಾತ್ರದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಕಥೆಗೆ ಮಾಡುವ ಬಹಳ ದೊಡ್ಡ ಅನ್ಯಾಯ ಮತ್ತು ಅವಮಾನ. ಕಥೆಗಾರನಿಗೆ ಚಹಾ ಕುಡಿಯುವ ಅಭ್ಯಾಸವಿಲ್ಲವೆಂದರೆ ಪಾತ್ರಗಳೂ ಚಹಾ ಕುಡಿಯಬಾರದು ಎಂಬ ಕುತರ್ಕ ಯಾಕೆ ? ಕಥೆಯ ಪಾತ್ರದೊಳಗೆ ನಾವು ಹೋಗಿ-ಬಂದು ಬರೆಯಬೇಕೇ ವಿನಃ, ಪಾತ್ರಗಳನ್ನು ನಮ್ಮಲ್ಲಿ ಆಹ್ವಾನಿಸಿ ಬರೆಯುವ ಪ್ರಯತ್ನ ಮಾಡಬಾರದು.
ಮ್ಮ ಸ್ನೇಹಿತರಿಗೇ ನಮ್ಮ ಕಥೆಗಳು ಅರ್ಥವಾಗದೇ ಹೋದಲ್ಲಿ ಏನು ಲಾಭ ? ಕೇವಲ ವಿಮರ್ಶಕರನ್ನು ಮೆಚ್ಚಿಸುವ ಕೆಲಸ ಮಾಡೋಕೆ ಹೊರಟರೆ, ಒಂದಲ್ಲ ಒಂದು ದಿನ ಕಥೆ, ಮನಸ್ಸಿಗೆ ತಟ್ಟದೇ ಬಿದ್ದು ಹೋಗುತ್ತದೆ. ಯಾರೋ ಪಂಡಿತರು ಹೇಳಿದ ಮಾತ್ರಕ್ಕೆ ಕಥೆ ಚೆನ್ನಾಗಿದೆ ಎಂಬ ಆಯ್ಕೆ ನಮ್ಮದಾಗಬಾರದು. ಯಾವುದೇ ಕೃತಿಯನ್ನಾಗಲೀ ಸ್ವೀಕರಿಸುವ ಮುಕ್ತ ಮನೋಭಾವ, ಜೊತೆಗೊಂದಿಷ್ಟು ಸ್ವಂತಿಕೆ ಪ್ರತಿಯೊಬ್ಬರಲ್ಲೂ ಇದ್ದರೆ ನಮ್ಮ ಆಯ್ಕೆಗಳನ್ನು ಮತ್ಯಾರೋ ನಿಯಂತ್ರಿಸಲಾರರು. ಬಹುಷಃ ಇಂದಿನ ಹಲವರಿಗೆ ಮತ್ತು ಕಥೆಗಳಿಗೆ ಹಿರಿಯರನ್ನು ಮೆಚ್ಚಿಸುವುದೇ ಮುಖ್ಯ ಗುರಿಯಾಗಿದೆ !
ಥೆಗಳು ಅಂಗಳದಲ್ಲಿ ಹಾಕುವ ರಂಗೋಲಿಯಂತಿರಬೇಕೇ ವಿನಃ ಎಂಜಿನಿಯರಿಂಗ್ ಡ್ರಾಪ್ಟ್‌ಬೋರ್ಡ್‌ನ ಡ್ರಾಯಿಂಗ್ ಗಳಾಗಬಾರದು. ಕಥೆಯೆಂಬ ಕಥೆಯೇ ಓದುವುದಕ್ಕೆ ಕಷ್ಟ ಆದರೆ ಹ್ಯಾಗೆ ಸ್ವಾಮೀ ?
'ನನ್ನ ಕಥೆಗಳು ಮುಖ್ಯವಾಹಿನಿಯಲ್ಲಿ ಬರಬೇಕು' ಅನ್ನೋ ಹಟಕ್ಕೆ ಕಟ್ಟುಬಿದ್ದು ಮಿತಿಗಳನ್ನು ಹಾಕಿಕೊಂಡರೆ ಕಥಾ ಸ್ವಾತಂತ್ರ್ಯವನ್ನೇ ಕಸಿದುಕೊಂಡಂತೆ ! ಕೆಲವೊಂದು ಬಾರಿ ಒಳ್ಳೆಯ ಕಥೆಯಾದರೂ ಅದು ಮುಖ್ಯವಾಹಿನಿಗಳಲ್ಲಿ, ಮಾಧ್ಯಮದಲ್ಲಿ ಪ್ರಕಟವಾಗದೇ ಹೋಗಬಹುದು. ಹಾಗಾಗಿ ಕಥೆಗಾರ ತಾನು ಬರೆದ ಕಥೆ ತಕ್ಷಣವೇ ಶ್ರೇಷ್ಟ ಕಥೆಯಾಗಬೇಕು ಎಂಬ ಅಭಿಪ್ರಾಯಕ್ಕೆ ಇಳಿಯಬಾರದು.
ಥೆಗಾರರು ಮೈಗಳ್ಳತನಕ್ಕೆ ಬೀಳೋದು ಯಾವಾಗ ? - 'ಸ್ಫೂರ್ತಿ ಬರಬೇಕು' ಅಂತ ಪಟ್ಟಾಗಿ ಕುಳಿತು ಪ್ರಯತ್ನ ಕೈಬಿಟ್ಟಾಗ ! ಕೊನೆಗೆ ಕಥೆ ಅದರ ಪಾಡಿಗೆ, ತಾನು ತನ್ನ ಪಾಡಿಗೆ. ಕಥೆ ಬರೆಯುವ passion ಇದ್ದರೆ ಸಮಯ ಇಲ್ಲದಿದ್ದರೂ ನಾವು ಅದನ್ನು ಹೊಂದಿಸಿಕೊಳ್ಳಬಲ್ಲೆವು. ನಾನಂತೂ ಆಫೀಸ್‌ಗೆ ಹೋಗುವ, ಮತ್ತು ವಾಪಾಸ್ಸು ಬರುವ ತಲಾ ಒಂದೂವರೆ-ಒಂದೂವರೆ ಗಂಟೆಗಳ ಹೊತ್ತಿನಲ್ಲಿ ಬೆಂಗಳೂರಿನ ಟ್ರಾಫಿಕ್ ಜಾಮ್‌ನ ನಡುವೆ ಕತೆ ಬರೆಯೋದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ. ಕಂಪ್ಯೂಟರ್ ಲ್ಯಾಪ್‌ಟಾಪ್ ನನ್ನ ಕೈ ಹೇಳಿದಂತೆ ಕೇಳುತ್ತಾ ಹೋಗುತ್ತದೆ. ಹಾಗಾಗಿಯೇ ನನ್ನ ಕಥಾ ಸಂಕಲನ 'ಚೇಳು' ಬೆಂಗಳೂರಿನ ಟ್ರಾಫಿಕ್‌ಗೂ, ಅದರ ನಡುವೆ ತೊಂದರೆಯಾಗದಂತೆ ಓಡಿಸುವ ನನ್ನ ಡ್ರೈವರ್‌ಗೂ ಅರ್ಪಣೆ !
ವಿದೇಶಗಳಲ್ಲಿ ಸಣ್ಣ ಕಥಾ ಪ್ರಕಾರ ಅಡಗಿಹೋಗುತ್ತಿದೆಯದರೂ, ಯಾವುದೇ ಲೇಖಕನ ಕಥೆ ಬಂದರೂ ಅದೊಂಥರಾ ಸಂಭ್ರಮ ! ಎಷ್ಟೋ ಸಲ ಲೇಖಕನೇ ಆ ಸಂಭ್ರಮದಲ್ಲಿ ಪಾಲ್ಗೊಳ್ಳುವುದಕ್ಕಾಗಿ ತಾನೇ ತೆರಳಿ ಪ್ರತಿಗಳನ್ನು ಮಾರಾಟ ಮಾಡುವ ಸಂಸ್ಕೃತಿ ಇದೆ. ಹಾಗಾಗಿ, 'ಕಥೆ ಬರೆಯೋ ತನಕ ಮಾತ್ರ ತನ್ನದು. ಬರೆದ ನಂತರ ಓದುಗರದ್ದು' ಅನ್ನೋ ಮಾತಿನಲ್ಲಿ ಅರ್ಥವಿಲ್ಲ. ಬಿಡುಗಡೆ ಅನ್ನೋದು ಮನಸ್ಸಿನ ಪ್ರಕ್ರಿಯೆ. ಓದುಗ ಕಥೆಯನ್ನು ಓದಿದ ಮೇಲೆ ನಮ್ಮ ಹೃದಯದಿಂದ ಅವನ ಮನಸ್ಸಿಗೆ ಆಗುವ ಭಾವ ವರ್ಗಾವಣೆಯೇ ಕಥೆಯ ಬಿಡುಗಡೆ...
ಯಾ ರೀತಿಯ ಓದುಗರು ಮೆಚ್ಚಿದ್ದಾರೆ ಎಂಬುದು ಮುಖ್ಯವೇ ಹೊರತು ವಿಮರ್ಶಕರನ್ನು ನಂಬಿ, ಕಥೆಗಳನ್ನು ಶ್ರೇಣೀಕರಿಸಿ ಪುರಸ್ಕರಿಸುವುದೋ, ತಿರಸ್ಕರಿಸುವುದೋ ಒಳ್ಳೆಯದಲ್ಲ. ಜನಪ್ರಿಯತೆಯೂ ಸಾಹಿತ್ಯಕ್ಕೆ ಅಗತ್ಯವಾದದ್ದರಿಂದ ಯವುದೇ ಸಾಹಿತ್ಯವನ್ನು ಜನಪ್ರಿಯ ಸಾಹಿತ್ಯ ಅಂತ ಧಿಕ್ಕರಿಸುವ ಅಗತ್ಯವಿಲ್ಲ.
ಥೆ ಕಟ್ಟಲಿಕ್ಕಾಗದು. ಅದು ಹುಟ್ಟುವ ಪ್ರಕ್ರಿಯೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ನಮ್ಮ ಅನುಭವದ ಕಥೆಯನ್ನು, ನಮ್ಮದೇ ಆದ ಪ್ರಪಂಚದಲ್ಲಿ ಬರೆಯೋಣ. ತಂತ್ರವೆನ್ನುವುದು ಏನಿದ್ದರೂ ಕಥೆಯೆಂಬ ದೇಹಕ್ಕೆ ಮಾಡುವ ಶೃಂಗಾರ !

ಒಟ್ಟಿನಲ್ಲಿ ವಸುದೇಂಧ್ರರ 'ಕಥೆ ಕಟ್ಟುವ' ಟಿಪ್ಸ್ ನಮ್ಮೊಳಗಿನ ಕಥೆಗಳಿಗೆ ಪುಟ್ಟ ಮುನ್ನುಡಿ. ಏನಂತೀರಾ !

Wednesday, November 5, 2008

ಟ್ಯೂಬ್ಲೈಟ ಹೊತ್ತಿಕೊಂಡಿತ್ತು...

ನಿಮಗ್ಗೊತ್ತಾ?
ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ೪ ವರ್ಷಗಳ ವರೆಗೂ ಭ್ರಮರಿಯ ಕಲ್ಪನೆ ನನ್ನ ಕನಸಿಗೂ ಬಂದಿರಲಿಲ್ಲ. ಅದು ನನ್ನ ಪಿ.ಜಿ. ವಿದ್ಯಾಭ್ಯಾಸದ ಕೊನೆಯ ದಿನಗಳು. ಸುಮ್ಮನೆ ಅದೇನೋ ಒಳಗೊಳಗೇ ಕೊರಗು. ನನ್ನಿಂದ ಹೊಸ ಆಲೋಚನೆಗಳು ಬರಲೇ ಇಲ್ವೇ ? !
ಅದೊಂದು ದಿನ ರಾಮು ೬ ತಿಂಗಳ ನಂತರ ಮೊದಲ ಬಾರಿಗೆ ಫೋನಾಯಿಸಿದ್ದ. ಗಂಟೆಗಳ ಕಾಲ ಮುಂದುವರೆದಿತ್ತು ನಮ್ಮ ಸುಧೀರ್ಘ ಮಾತುಕತೆ. ಯಾವ ಕ್ಷಣದಲ್ಲಿ ನನ್ನ ಟ್ಯೂಬ್ಲೈಟ ಹೊತ್ತಿಕೊಂಡಿತೋ ಗೊತ್ತಿಲ್ಲ, ಆ ವರೆಗೆ ನನ್ನ ಒಳಗೆ ಹೊಯ್ದಾಡುತ್ತಿದ್ದ ಯಾವುದೋ ಕರೆಗೆ ( ಫೋನಿಂದಲ್ಲ !) ಸರಿಯಾಗಿ ಸ್ಪಂದಿಸಿಲ್ಲ ಎಂದು ಕೊರಗುತ್ತಿದ್ದ ನಾನು ಜಿಗ್ಗನೆ ಎದ್ದು ಕುಳಿತಿದ್ದೆ. ಅವನ ಬಳಿಯೇ ನಾನು ಮೊದಲು ನಾನಾ ಯೋಚನೆಯನ್ನು ಬಿಚ್ಚಿಟ್ಟದ್ದು. ಆದರೆ ಚೈತ್ರರಶ್ಮಿಯ ಒಳಗಿನ ತುಡಿತಗಳ ಅರಿವಿದ್ದ ಅವನಿಗೆ ಕಂಡ ನನ್ನ ಆ ತಿಣುಕಾಡುತ್ತಿದ್ದ ಕನವರಿಕೆಗಳು ಅಷ್ಟು ಸುಲಭವಾಗಿ ಉಳಿದವರಿಗೆ ಕಂಡಿರಲಿಲ್ಲ. ಆದರೆ ಮನಸ್ಸು ನಿರ್ಧಾರ ಮಾಡಿಯಾಗಿತ್ತು. ಹಾಗಾಗಿ ನಾನು ನನ್ನ ಪತ್ರಿಕೆ ಪ್ರಾರಂಭಿಸುವ ಐಡಿಯಾ ಯಾರ ಬಳಿ ಹೇಳಿದರೂ ಅದು ಹಾಸ್ಯಾಸ್ಪದ ! ಬಹುಷಃ ಪ್ರತಿ ಪತ್ರಿಕೆಗಳು ಹುಟ್ಟುವ ಮೊದಲು ಈ ಗುಂಗು, ಹೇಳುವ ಹಿತೈಷಿಗಳ (?) ಮಾತನ್ನು ನುಂಗುವುದು ಇರುತ್ತದೇನೋ !

Monday, November 3, 2008

Noopura bhramari- Magazine for Performing Arts

Kannada Privately Circulated Bi-Monthly, Well Known magazine In the Art field Dedicated for Dance and Performing Arts. Website : http://www.noopurabhramari.com/
Come and Join...It is a platform to Know about Ourselves and also Our Dance Tradition...We together can contribute to this field.
Let Us Move around in this Anklets World....Recently I have secured 1st place in AKKA souvenir article International level article writing...Topic is Contribution of Kannadigas to Performence Arts Fusion Tradition.